This web is in Kannada, in case you have problems viewing it : DownloadKannadaFonts and Set Browser Encoding to UTF8
ರೈತ ತೀರ್ಪು
ಯೂರೋಪು, ಅಮೇರಿಕಾಗಳಲ್ಲಿ ಚಾಲ್ತಿಯಲ್ಲಿರುವಂತಹ ನಾಗರೀಕ ನ್ಯಾಯಮಂಡಳಿಯ ಮಾದರಿಯಲ್ಲಿ ರೈತ ತೀರ್ಪನ್ನು ಆಯೋಜಿಸಲಾಗಿದೆ. ಕರ್ನಾಟಕದ ವಿವಿಧ ಪ್ರದೇಶಗಳ ರೈತರು, ರೈತ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳನ್ನು ಒಂದೇ ವೇದಿಕೆಯ ಮೇಲೆ ತಂದು, ವರ್ತಮಾನದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳಿಂದ ಅವರಿಗೆ ಆಗುತ್ತಿರುವ ಲಾಭವನ್ನು ಅವರೇ ಪರಾಮರ್ಶಿಸುವಂತೆ ಮಾಡುವ ಉದ್ದೇಶವನ್ನು ರೈತ ತೀರ್ಪು ಹೊಂದಿದೆ.
ಭಾರತದ ಕೃಷಿಯ ಸಂದಿಗ್ಧತೆ ನಮ್ಮ ಕಡೆಗೆ ದುರುಗುಟ್ಟಿ ನೋಡುತ್ತಿದೆ. ಹೆಚ್ಚುತ್ತಿರುವ ರೈತರ ಆತ್ಮಹತ್ಯೆ, ಕೃಷಿ ಸಾಲ ಕೈಗಾರಿಕಾ ಉಪಯೋಗಕ್ಕಾಗಿ ಕೃಷಿ ಭೂಮಿಗಳ ಕಬಳಿಕೆ ಮತ್ತು ಹೊಸ ತಂತ್ರಜ್ಞಾನಗಳು ಒಡ್ಡುತ್ತಿರುವ ಆತಂಕ ಇವು ಸಮಸ್ಯೆಯ ವಿವಿಧ ಮುಖಗಳು. ಇದರೊಂದಿಗೆ ಇಡೀ ಕೃಷಿ ಕ್ಷೇತ್ರದ ಬಗ್ಗೆ ಬದಲಾದ ದೃಷ್ಟಿಕೋನವು ಮೇಲಿನ ಸಮಸ್ಯೆಗಳಷ್ಟೇ ಪ್ರಮುಖವಾದುದು. ಈ ದೇಶದ ನೀತಿ ನಿರೂಪಕರು ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಲು ಈ ಕೆಳಕಾಣಿಸಿದ ದಾರಿಗಳನ್ನು ಹಿಡಿದಿದ್ದಾರೆ.
೧. ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಭೂಮಿಯನ್ನು ಒಗ್ಗೂಡಿಸುವುದು.
೨. ಗುತ್ತಿಗೆ ಆಧಾರದ ಮೇಲೆ ಬೆಳೆ ತೆಗೆಯುವ ಪದ್ಧತಿ.
೩. ಕೃಷಿ ಕ್ಷೇತ್ರದಲ್ಲಿ ಮಾರುಕಟ್ಟೆಯ ಪಾತ್ರವನ್ನು ಹೆಚ್ಚಿಸುವಿಕೆ.
ನೀತಿ ನಿರೂಪಕರು ಸಮಸ್ಯೆಯ ಪರಿಹಾರಕ್ಕಾಗಿ ತುಳಿದಿರುವ ಮೇಲಿನ ದಾರಿಗಳು ಸಮಸ್ಯೆಗಿಂತಲೂ ಹೆಚ್ಚು ಸಮಸ್ಯಾತ್ಮಕವಾದದ್ದು. ಇದು ಬಾಣಲೆಯಿಂದ ಬೆಂಕಿಗೆ ಬೀಳುವ ಕ್ರಿಯೆ. ಕೃಷಿ ನೀತಿಗೂ ಕೃಷಿಗೂ ನಡುವೆ ಅಜಗಜಾಂತರ ವ್ಯತ್ಯಾಸ. ಉದಾಹರಣೆಗೆ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಲು ಸರ್ಕಾರ ಕೈಗೊಂಡ ಕ್ರಮಗಳೆಲ್ಲವೂ ವಿಫಲಗೊಂಡಿರುವುದು ಜೀವಂತ ನಿದರ್ಶನ.